ಬೆಂಗಳೂರು, ನ. 14:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಎಲ್ಲ ವರ್ಗದ ಜನರ ಅಗತ್ಯಗಳಿಗನುಸಾರವಾಗಿ ವಿವಿಧ ಶ್ರೇಣಿಯ ಬಸ್ ಸೇವೆ ಒದಗಿಸುತ್ತಿದ್ದು, ದೇಶಕ್ಕೇ ಮಾದರಿಯಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಅವರು ಹೇಳಿದ್ದಾರೆ.ಅವರು ಶುಕ್ರವಾರ ಅಂಬಾರಿ ಕರೋನಾ ಸ್ಲೀಪರ್ ಬಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನರ್ಮ್ ಯೋಜನೆಯಡಿ ಸಾರಿಗೆ ಸಂಸ್ಥೆಯು ನಿಗದಿತ ಅವಧಿಗಿಂತ 10 ತಿಂಗಳು ಮುಂಚಿತವಾಗಿಯೇ ಯೋಜನೆ ಪೂರ್ಣಗೊಂಡಿದೆ. ಅನುದಾನ ಬಳಕೆಯಲ್ಲಿಯೂ ಸಾರಿಗೆ ಸಂಸ್ಥೆ ಮೊದಲ ಸ್ಥಾನದಲ್ಲಿದ್ದು, ಶೇ.103 ಗುರಿ ಸಾಧನೆಯಾಗಿದೆ ಎಂದು ವಿವರಿಸಿದರು. ನರ್ಮ್ ಯೋಜನೆಯಡಿ ಸಾರಿಗೆ ಸಂಸ್ಥೆ ಖರೀದಿಸಿದ ಬಸ್ಗಳ ವಿನ್ಯಾಸ ಕುರಿತು ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇದೇ ಮಾದರಿಯ ಬಸ್ಗಳನ್ನು ಬಳಸುವಂತೆ ಇತರ ರಾಜ್ಯಗಳಿಗೆ ಸೂಚಿಸಿದೆ ಎಂದು ಅವರು ತಿಳಿಸಿದರು.
ಸಾರಿಗೆ ಸಂಸ್ಥೆಯ ನೂತನ ಯೋಜನೆಗಳ ಕುರಿತು ವಿವರಿಸಿದ ಅವರು ಮೈಸೂರಿನ ಬಸ್ ನಿಲ್ದಾಣ ಹಾಗೂ ಎಲ್ಲಾ ತಂಗುದಾಣಗಳಲ್ಲಿ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ಅನ್ನು ಅಳವಡಿಸಲು ವಿಶ್ವಬ್ಯಾಂಕ್ ರು.22 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ವಿವರಿಸಿದರು. ಈ ವ್ಯವಸ್ಥೆಯಿಂದ ಬಸ್ ಸಂಚಾರದ ಕ್ಷಣ ಕ್ಷಣದ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.ಖಾಸಗಿ ಬಸ್ಗಳ ಲಾಬಿಯನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಒಟ್ಟು 3500 ಬಸ್ ಸೇರ್ಪಡೆಗೊಳಿಸಲಾಗಿದೆ.
ಚೆನ್ನೈಗೆ ಅಂಬಾರಿ ಕರೋನಾ ಸ್ಲೀಪರ್ ಬಸ್ ಸೇವೆ ಪ್ರಾರಂಭ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು-ಚೆನ್ನೈ ನಡುವೆ ನೂತನವಾಗಿ ಕರೋನ ಸ್ಲೀಪರ್ ಬಸ್ ಪ್ರತಿದಿನ ರಾತ್ರಿ 10.30 ಕ್ಕೆ ಬಿಟ್ಟು ಹೊಸೂರು, ಕೃಷ್ಣಗಿರಿ, ವೆಲ್ಲೂರು ಮಾರ್ಗವಾಗಿ ಬೆಳಿಗ್ಗೆ 6.15 ಕ್ಕೆ ಚೆನ್ನೈ ತಲುಪಲಿದೆ. ಅದೇ ಬಸ್ ಚೆನ್ನೈನಿಂದ ರಾತ್ರಿ 10.50ಕ್ಕೆ ಹೊರಟು ಅದೇ ಮಾರ್ಗವಾಗಿ ಬೆಳಿಗ್ಗೆ 6015ಕ್ಕೆ ಬೆಂಗಳೂರು ತಲುಪಲಿದೆ.
ಇದಕ್ಕೆ ರು.590 ಪ್ರಯಾಣದರ ವಿಧಿಸಲಾಗಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ನಿಗದಮದ ಮುಂಗಡ ಟಿಕೆಟ್ ಬುಕಿಂಗ್ ಕೌಂಟರ್ಗಳಿಂದ, ಅಂತರ್ಜಾಲ ಮತ್ತು ಮೊಬೈಲ್ ಬುಕಿಂಗ್ ಮೂಲಕ ಸಹ ಟಿಕೆಟ್ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.
12 ಮೀಟರ್ ಉದ್ದದ ಈ ಸ್ಲೀಪರ್ ಬಸ್ಸನ್ನು ಪುಣೆಯ ಕರೋನಾ ಬಸ್ ಮ್ಯಾನ್ಯುಫ್ಯಾಕ್ಚರರ್ಸ್ ಪ್ರೈ. ಲಿ. ಸಂಸ್ಥೆಯವರು ಪ್ರಯಾಣಿಕರ ಸುಖಕ್ಕಾಗಿ ವಿನ್ಯಾಸಗೊಳಿಸಿದ್ದಾರೆ. ಇದರಲ್ಲಿ 32ಪ್ರಯಾಣಿಕರ ಬರ್ತ್ಗಳನ್ನು ಅಳವಡಿಸಿದ್ದು, ಉತ್ಕೃಷ್ಟ ಒಳಾಂಗಣ ವಿನ್ಯಾಸ, ಓದುವ ದೀಪಗಳ ವ್ಯವಸ್ಥೆಯಿಂದ ಪ್ರಯಾಣ ಆರಾಮದಾಯಕಗೊಳಿಸುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ.
ಕೆಎಸ್ಆರ್ಟಿಸಿ ಉಪಾಧ್ಯಕ್ಷ ಜಗ್ಗೇಶ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ ಹಾಗೂ ಕರೋನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ ಕಲ್ಮಾಡಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)