ಬೆಂಗಳೂರು, ನ. 10 : ನಾನೇನು ತಪ್ಪು ಮಾಡಿರುವೆ? ಯಾವ ಹಗರಣದಲ್ಲಿ ಸಿಲುಕಿಕೊಂಡಿದ್ದೇನೆ? ನನ್ನ ಮೇಲೆ ಗಂಭೀರವಾದ ಆರೋಪ ಕೇಳಿ ಬಂದಿದೆಯೇ? ಭ್ರಷ್ಟಾಚಾರ ಎಸಗಿದ್ದೇನೆಯೇ? ಅಥವಾ ನಾನು ಅಸಮರ್ಥಳೆ? ನನ್ನ ರಾಜೀನಾಮೆ ಪಡೆಯಲು ಏನಾದರೊಂದು ಕಾರಣವಿದ್ದರೆ ಹೇಳಿ. ಹೀಗೆ ಪ್ರಶ್ನೆಗಳ ಮಳೆಗರೆದವರು ಸಚಿವ ಸ್ಥಾನ ಕಳೆದುಕೊಂಡ ಶೋಭಾ ಕರಂದ್ಲಾಜೆ.
ರಾಜೀನಾಮೆ ಸಲ್ಲಿಸಿದ ನಂತರ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಮತ್ತು ರೆಡ್ಡಿ ಸೇರಿದಂತೆ ಬಂಡಾಯ ಶಾಸಕರಿಗೆ ಎಸೆದಿರುವ ಸವಾಲಿದು. ನನ್ನ ರಾಜೀನಾಮೆಯಿಂದ ಒಳ್ಳೆಯದಾಗುವುದಾದರೆ ಅದಕ್ಕಿಂತ ಸಂತೋಷ ಸಂಗತಿ ಬೇರೆ ಏನಿದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.
ನಾನು ಮೊದಲಿನಿಂದಲೂ ಸಮಾಜಸೇವೆಯಲ್ಲಿ ತೊಡಗಿದ್ದೆ. ಇನ್ನು ಮುಂದೆಯೂ ಸಮಾಜಸೇವೆ ಮಾಡುತ್ತೇನೆ. ಪಕ್ಷ ಹಾಗೂ ಸಂಘ ಪರಿವಾರ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.
(ದಟ್ಸ್ ಕನ್ನಡ ವಾರ್ತೆ)