ಬೆಂಗಳೂರು, ನ.7: ಹೈದರಾಬಾದ್ ನಲ್ಲಿರುವ ರೆಡ್ಡಿ ಬಣದ ಶಾಸಕರ ಸಭೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬೇಡಿಕೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ. ಮುಂದಿನ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಜನಾರ್ದನರೆಡ್ಡಿ ಅವರಿಗೆ ರೆಡ್ಡಿ ಬಣದ ಶಾಸಕರು ನೀಡಿದ್ದಾರೆ.
ಭಿನ್ನಮತೀಯ ಶಾಸಕರು ಇನ್ನೂ ಎರಡು ದಿನ ಹೈದರಾಬಾದ್ ನಲ್ಲೇ ಉಳಿಯಲಿದ್ದು, ಬಿಜೆಪಿ ವರಿಷ್ಠರು ತಮ್ಮ ಪರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ತಮ್ಮ ಬೆಂಬಲಿಗರಿಗೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇ ಬೇಕು ಎಂಬ ದೃಢ ನಿಲುವಿನಲ್ಲಿ ಜನಾರ್ದನ ರೆಡ್ಡಿ ಇದ್ದಾರೆ.
ರಾಜ್ಯದಲ್ಲಿ ಬಿಜೆಪಿ ಭಿನ್ನಮತ ಇನ್ನೂ ಬಗೆಹರಿದಿಲ್ಲ. ತಮ್ಮ ಬೆಂಬಲಿಗ ಶಾಸಕರ ಅಭಿಪ್ರಯ ಸಂಗ್ರಹಿಸಲಾಗಿದೆ. ನಾಯಕತ್ವ ಬದಲಾವಣೆ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಶುಕ್ರವಾರ ಮಧ್ಯರಾತ್ರಿ ಹೈದರಾಬಾದ್ ನಲ್ಲಿ ಜನಾರ್ದನರೆಡ್ಡಿ ಹೇಳಿದ್ದಾರೆ.
ಶನಿವಾರ ಜನಾರ್ದನರೆಡ್ಡಿ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿದ್ದು ಕಂದಾಯ ಸಚಿವ ಕರುಣಾಕರರೆಡ್ಡಿ ಜತೆ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು ಭಾನುವಾರದಿಂದ ನೆರೆ ಸಂತ್ರಸ್ತರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಭಿನ್ನಮತದ ಸಮಸ್ಯೆ ಬಗೆಹರಿದಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)