ಬೆಂಗಳೂರು, ನ.7: ಪುಸ್ತಕ ಪ್ರೇಮಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ 'ಬೆಂಗಳೂರು ಪುಸ್ತಕೋತ್ಸವ 2009' ಕ್ಕೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಬೆಂಗಳೂರು ಅರಮನೆ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿದರು. ನವೆಂಬರ್ 6ರಿಂದ ನವೆಂಬರ್ 15ರವರೆಗೆ ಹತ್ತು ದಿನಗಳ ಕಾಲ ಪುಸ್ತಕೋತ್ಸವ ನಡೆಯಲಿದೆ.
ಮಕ್ಕಳು ಕನ್ನಡದ ಸಂಪರ್ಕ ಕಳೆದುಕೊಳ್ಳುತ್ತಿದ್ದಾರೆ. ಕನ್ನಡ ಪುಸ್ತಕಗಳ ಬಗ್ಗೆ ನಿರಾಸಕ್ತಿ ತಳೆಯುತ್ತಿದ್ದು ಪರಿಸ್ಥಿತಿ ಹೀಗೇ ಮುಂದುವರಿದರೆ ಕನ್ನಡದ ಉಳಿವು ಕಷ್ಟಸಾಧ್ಯವಾಗುತ್ತದೆ ಎಂದು ಶಿವರುದ್ರಪ್ಪ ಆತಂಕ ವ್ಯಕ್ತಪಡಿಸಿದರು. ಕನ್ನಡ ಉಳಿಸುವ ಮತ್ತು ಕಲಿಸುವ ಉದ್ದೇಶದಿಂದ ಕನ್ನ್ನಡ ಭಾಷಾ ಶಿಕ್ಷಣವನ್ನು ಕನ್ನಡದಲ್ಲಿ ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು.
ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷ ಬೆಂಗಳೂರು ಪುಸ್ತಕೋತ್ಸವ ನಡೆಯುತ್ತಿದೆ. ಪುಸ್ತಕ ಪ್ರೇಮಿಗಳ ಮನಗೆದ್ದಿರುವ ಈ ಪುಸ್ತಕಕೋತ್ಸವವನ್ನು ಬೆಂಗಳೂರು ಪುಸ್ತಕ ವ್ಯಾಪಾರಿಗಳು ಮತ್ತು ಪ್ರಕಾಶಕರ ಸಂಘ ನಿರ್ವಹಿಸುತ್ತಿದೆ. ಈ ಬಾರಿಯ ಪುಸ್ತಕೋತ್ಸವದಲ್ಲಿ ಒಟ್ಟು 340 ಮಳಿಗೆಗಳನ್ನು ತೆರೆಯಲಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಭಾಷೆಯ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದ್ದು ಕನ್ನಡಕ್ಕೆ 94 ಮಳಿಗೆಗಳನ್ನು ಮೀಸಲಾಗಿದೆ. ಕೋಲ್ಕತ್ತಾ, ಚೆನ್ನೈ, ದೆಹಲಿ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಪುಸ್ತಕೋತ್ಸವ ಪ್ರೇಮಿಗಳ ಹೆಚ್ಚಾಗಿ ಆಕರ್ಷಿಸುತ್ತಿದೆ ಎನ್ನುತ್ತಾರೆ ಬೆಂಗಳೂರು ಪುಸ್ತಕೋತ್ಸವದ ಕಾರ್ಯಕ್ರಮ ನಿರ್ದೇಶಕ ಬಿ ಎಸ್ ರಘುರಾಮ್.
(ದಟ್ಸ್ ಕನ್ನಡ ವಾರ್ತೆ)