ಬೆಂಗಳೂರು, ನ. 6 : ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್ನ ಸುಧಾಮೂರ್ತಿ, ಕಂಪನಿಯಲ್ಲಿರುವ ತಮ್ಮ 20 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರು ಮಾರಾಟದಿಂದ ಸಂಗ್ರಹವಾದ ಸುಮಾರು 9.2 ಕೋಟಿ ಡಾಲರ್ (ಅಂದಾಜು 430.37 ಕೋಟಿ ರುಪಾಯಿ) ಅನ್ನು ಉದ್ಯಮ ಉತ್ತೇಜನ ನಿಧಿಯಲ್ಲಿ ತೊಡಗಿಸುವ ಮೂಲಕ ಸುಧಾಮೂರ್ತಿ ಕೂಡ ಪತಿ ನಾರಾಯಣ ಮೂರ್ತಿ ಜತೆಗೆ ನೂತನ ಉದ್ಯಮದಲ್ಲಿ ಕೈಜೋಡಿಲಿದ್ದಾರೆ.
ಇನ್ಫೋಸಿಸ್ನ ಮುಖ್ಯ ಮಾರ್ಗದರ್ಶಕ ನಾರಾಯಣ ಮೂರ್ತಿ, ಇತ್ತೀಚೆಗೆ ಶೇ. 0.13ರಷ್ಟು ಷೇರು ಮಾರಾಟ ಮಾಡಿದ್ದರು. 8 ಲಕ್ಷ ಷೇರುಗಳ ಮಾರಾಟದಿಂದ ಸಂಗ್ರಹವಾದ 174.3 ಕೋಟಿ ರುಪಾಯಿ ನಿಧಿಯನ್ನು ವೆಂಚರ್ ಕ್ಯಾಪಿಟಲ್ ಸ್ಥಾಪನೆಗೆ ಬಳಸುತ್ತಿರುವುದಾಗಿ ಅವರು ಹೇಳಿದ್ದರು. ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೊಸ ಉದ್ಯಮ ಆರಂಭಿಸಿರುವುದಾಗಿ ಅವರು ತಿಳಿಸಿದ್ದರು.
ಆರಂಭಿಕ ಹಂತದಲ್ಲಿ 3-4 ಮಂದಿ ಪ್ರತಿಭಾವಂತ ಯುವ ಜನರನ್ನು ಉದ್ಯಮಕ್ಕಾಗಿ ನಾರಾಯಣಮೂರ್ತಿ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ. ನೂತನ ಉದ್ದಿಮೆಗಾಗಿ ಹಣ ಸಂಗ್ರಹ ಹಾಗೂ ವೆಚ್ಚದ ವಿಷಯದಲ್ಲಿ ಯಾವುದೇ ಕಾಲಮಿತಿಯನ್ನು ನಾವು ಹಾಕಿಕೊಂಡಿಲ್ಲ. ಯಾವುದೇ ಆತುರಪಡುವುದಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಮುಂದಿನ ಹಂತದ ಬಂಡವಾಳ ಸಂಗ್ರಹಕ್ಕೆ ಸದ್ಯಕ್ಕೆ ಮೂರ್ತಿ ಸ್ಪಷ್ಟಪಡಿಸಿಲ್ಲ ಎಂದು ಇನ್ಫೋಸಿಸ್ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)