ಬೆಂಗಳೂರು, ನ. 6 : ಇಡೀ ರಾಜ್ಯವೇ ನೆರೆ ಸಂತ್ರಸ್ತರ ಪರವಾಗಿ ನಿಂತಿರುವಾಗ ರೆಡ್ಡಿಗಳು ಅದಿರು ಲಾರಿಗಳ ಮೇಲೆ ವಿಧಿಸಿರುವ ಸುಂಕ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಜನರ ಎದುರು ಗೌರವ ಉಳಿಸಿಕೊಳ್ಳಬೇಕಾದರೆ ಮುಖ್ಯಮಂತ್ರಿಗಳು ರೆಡ್ಡಿಗಳನ್ನು ದೂರವಿಡಬೇಕು. ಈ ಬಳ್ಳಾರಿ ರೆಡ್ಡಿ ಸಹೋದರರು 'ಡಕಾಯಿತರು' ಎಂದು ಕರುನಾಡ ಸೇನೆಯ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್ ಜರಿದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖಮಂತ್ರಿ ಯಡಿಯೂರಪ್ಪ ಇದೇ ಡಕಾಯಿತರನ್ನು ಬಳಸಿಕೊಂಡು 'ಸರಕಾರ' ಎಂಬ ಮನೆ ಕಟ್ಟಿಕೊಂಡರು. ಇಂದು ಅದೇ ಡಕಾಯಿತರು ಮನೆ ಬಿಟ್ಟು ಕೊಡುವಂತೆ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಸರಿಯಾದ ಪಾಠ ಕಲಿಸಿದ್ದಾರೆ. ರೆಡ್ಡಿಗಳು ಸ್ವಾರ್ಥ ಸಾಧನೆಗೆ ಮುಂದಾಗಿದ್ದು, ಇವರ ವರ್ತನೆ ಅಸಹ್ಯ ಮೂಡಿಸುತ್ತಿದೆ ಎಂದು ಶ್ರೀಧರ್ ದೂರಿದ್ದಾರೆ.
ಸಿಎಂ ಯಾವ ಕಾರಣಕ್ಕೂ ಅದಿರು ಲಾರಿಗಳ ಮೇಲೆ ಹಾಕಿರುವ ಶುಂಕವನ್ನು ಹಿಂದಕ್ಕೆ ಪಡೆಯಬಾರದು. ಒಂದೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಹಿಂದಕ್ಕೆ ಪಡೆದರೆ ಅವರಸ್ಟು ದುರ್ಬಲ ಮುಖ್ಯಮಂತ್ರಿ ಇನ್ನೊಬ್ಬರಿರುವುದಿಲ್ಲ. ಈ ರೆಡ್ಡಿಗಳನ್ನು ಆದಷ್ಟು ಬೇಗ ಮಟ್ಟ ಹಾಕಬೇಕು ಎಂದು ಅಗ್ನಿ ಶ್ರೀಧರ್ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)