clear
clear
clear
clear
ಮುಖಪುಟ » ಸುದ್ದಿಜಾಲ » ಯಡ್ಡಿ ಆಡಳಿತ » ಪೂರ್ಣಪಾಠ
ಕೆಂಪೇಗೌಡ ನಿಲ್ದಾಣಕ್ಕೆ ಕಾಯಕಲ್ಪ

R Ashok
ಬೆಂಗಳೂರು, ನ. 6 : ಸಾರ್ವಜನಿಕರಿಗೆ ಆಧುನಿಕ ಸೌಲಭ್ಯ ನೀಡಲು ಹಾಗೂ ಮಾಹಿತಿ ನೀಡುವಿಕೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೊಸ ನಿಯಂತ್ರಣ ಕೊಠಡಿ, ಮಾಹಿತಿ ಫಲಕ ಹಾಗೂ ವಿನೂತನ ಲೈಟ್‌ಗಳ ಅಳವಡಿಕೆಗೆ ಬಿಎಂಟಿಸಿ ಮುಂದಾಗಿದೆ.

ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ, ಬೀಡಿ, ಸಿಗರೇಟ್ ವ್ಯಾಪಾರ, ಭಿಕ್ಷಾಟನೆ ಮತ್ತಿತರ ಚಟುವಟಿಕೆಗೆ ಕಡಿವಾಣ ಹಾಕಲಾಗಿದೆ. ಇದೀಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮಾಹಿತಿ ಕೊರತೆ ನಿವಾರಿಸಲು 24 ಗಂಟೆ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ, ಮಾಹಿತಿ ಫಲಕ ಅಳವಡಿಕೆಗೆ ನಿರ್ಧರಿಸಿದೆ.

ನಿಯಂತ್ರಣ ಕೊಠಡಿ :
ಸಂಸ್ಥೆ ಈಗಾಗಲೇ ಒಂದು ನಿಯಂತ್ರಣ ಕೊಠಡಿ ಹೊಂದಿದ್ದು, ಇಲ್ಲಿ ಎರಡು ಕೌಂಟರ್ ಇದೆ. ಬೆಳಗ್ಗೆ 6 ರಿಂದ ರಾತ್ರಿ 10.30 ರವೆಗೆ ಕಾರ್ಯ ನಿರ್ವಹಿಸುವ ಇದರ ಜತೆಗೆ, ಸಂಸ್ಥೆಯ ಅಧಿಕಾರಿಗಳು, ಇನ್ಸ್‌ಪೆಕ್ಟರ್‌ಗಳು, ಸಂಚಾರ ನಿಯಂತ್ರಕರು ಹಾಗೂ ರಕ್ಷಣಾ ಸಿಬ್ಬಂದಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾರೆ. ಪ್ಲಾಟ್‌ಫಾರಂ 1 ರ ಸಮೀಪ ಇದ್ದ ಹಳೆಯ ನಿಯಂತ್ರಣ ಕೊಠಡಿಯನ್ನು ನವೀಕರಿಸಲಾಗುತ್ತಿದೆ.ಇದು ಇನ್ನು 10 ದಿನದೊಳಗೆ ಕಾರ್ಯಾರಂಭ ಮಾಡಲಿದೆ. ತುಸು ದೂರದಲ್ಲಿರುವ ನಾಗರಿಕರಿಗೂ ಸ್ಪಷ್ಟವಾಗಿ ಕಾಣಿಸುವ ಫಲಕವನ್ನು ಹೊಂದಿರಲಿದೆ.

ಮಾಹಿತಿ ಫಲಕ :
ಬಸ್ ನಿಲ್ದಾಣದ 4 ವೃತ್ತಗಳ ಪ್ರವೇಶ ಹಾಗೂ ನಿರ್ಗಮನ ದ್ವಾರದ ಗೋಡೆಗೆ ಆಯಾ ವೃತ್ತದಿಂದ ಹೊರಡುವ ಬಸ್ ಮಾರ್ಗಗಳ ವಿವರವನ್ನು ಅಳವಡಿಸಲಾಗುವುದು. ಜತೆಗೆ, ಪ್ರತಿ ಪ್ಲಾಟ್‌ಫಾರಂಗೂ ಪ್ರತ್ಯೇಕ ಫಲಕ ಅಳವಡಿಕೆ ಆಗಲಿದೆ. ಇದರಲ್ಲಿ ಬಸ್‌ಗಳ ಮಾರ್ಗ ವಿವರ ಹಾಗೂ ಪ್ರಮುಖ ನಿಲ್ದಾಣದ ಮಾಹಿತಿ ಇರಲಿದೆ.

ಮಾಹಿತಿಗಾಗಿ ಜನ ನಿಲ್ದಾಣದೆಲ್ಲೆಡೆ ಓಡಾಡುವಂತೆ ಆಗಬಾರದು ಎಂದು ಸಂಸ್ಥೆ ಈ ಕೆಲಸಕ್ಕೆ ಮುಂದಾಗಿದೆ ಎನ್ನುತ್ತಾರೆ ಬಿಎಂಟಿಸಿ ವಿಭಾಗೀಯ ಸಂಚಾರ ಅಧಿಕಾರಿ ವಿ. ನಾಗರಾಜ್. ಬೆಳಕು ವ್ಯವಸ್ಥೆ ನಿಲ್ದಾಣದಲ್ಲಿ ವಿದ್ಯುತ್ ದೀಪಗಳ ಕೊರತೆ ಇತ್ತು. ಇದರಿಂದಾಗಿ, ಜೇಬುಗಳ್ಳತನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಇದನ್ನು ನಿವಾರಿಸಲು ನಿಲ್ದಾಣದ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲು ಮುಂದಾಗಿದೆ. ಈ ಕಾರ್ಯ ಶೀಘ್ರವೇ ಆರಂಭವಾಗಲಿದೆ.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 6, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು