ಬೆಂಗಳೂರು, ನ. 4 : ಶಾಸಕರೇ ಹೋಟೆಲ್ ಗಳಿಂದ ಹೊರಬನ್ನಿ. ಇಲ್ಲದಿದ್ದರೆ ನವೆಂಬರ್ 7 ರಿಂದ ನಾನೇ ನಿಮ್ಮ ಕ್ಷೇತ್ರಗಳಿಗೆ ಭೇಟಿ ಜನರ ಸಮಸ್ಯೆಗಳನ್ನು ಆಲಿಸುವೆ ಎಂದು ಭಿನ್ನಮತೀಯ ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ವಿಜಾಪುರ ಜಿಲ್ಲೆಯ ಕೋಟ್ಯಾಳ ಗ್ರಾಮದ ಸ್ಥಳಾಂತರಕ್ಕೆ ಚಾಲನೆ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರು ರೆಸಾರ್ಟ್ ಗಳಲ್ಲಿ ತಂಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನತೆಯ ಬಳಿ ಹೋಗಿ ನಿಮ್ಮ ಶಾಸಕರು ಇಲ್ಲ. ಮುಂದೇನು ಮಾಡಬೇಕು ಎಂದು ಜನರನ್ನು ಕೇಳುತ್ತೇನೆ ಎಂದರು. ನಮ್ಮಲ್ಲಿ ಭಿನ್ನಮತ ಇಲ್ಲ. ಇರುವುದು ಯಡಿಯೂರಪ್ಪ ಬೇಕು-ಬೇಡ ಮಾತ್ರ. ನಮ್ಮ ಶಾಸಕರೆಲ್ಲರೂ ರೆಸಾರ್ಟ್ ರಾಜಕೀಯ ಬಿಟ್ಟು ಜನಸೇವೆಯಲ್ಲಿ ತೊಡಗಲಿ ಎಂದು ಕರೆ ನೀಡುತ್ತಿದ್ದೇನೆ ಎಂದು ಹೇಳಿದರು.
ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡುವ ವಿಷಯ ಕುರಿತು ನಾನು ಬಹಿರಂಗವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸಲಿದೆ. ಪಕ್ಷದ ರಾಷ್ಟ್ರೀಯ ನಾಯಕರು ಬಿಕ್ಕಟ್ಟಿಗೆ ಪರಿಹಾರ ಸೂತ್ರ ರೂಪಿಸುತ್ತಿದ್ದಾರೆ ಎಂದು. ಪ್ರಧಾನಿ ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದು, ಆ ಸಂದರ್ಭದಲ್ಲಿ ಹೈಕಮಾಂಡ್ ಭೇಟಿ ಮಾಡಿ ಎಲ್ಲವನ್ನೂ ವಿವರಿಸುತ್ತೇನೆ. ಅವರ ಸಲಹೆಯಂತೆ ನಡೆದುಕೊಳ್ಳುವುದಾಗಿ ಯಡಿಯೂರಪ್ಪ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)