ಭಟ್ಕಳ, ನ. 3 : ಬುರ್ಖಾ ಧರಿಸಿ ಕಾಲೇಜಿಗೆ ಬರುವ ವಿಚಾರಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ವಿವಾದ ಉಂಟಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಭಟ್ಕಳ ಸರಕಾರಿ ಕಾಲೇಜಿನಲ್ಲೂ ಈ ವಿವಾದ ತಲೆದೋರಿದೆ.
ಭಟ್ಕಳದಿಂದ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಸರಕಾರಿ ಪದವಿ ಕಾಲೇಜು ಪುರಸಭೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎರಡು ವಾರಗಳಿಂದ ಕೆಲವು ವಿದ್ಯಾರ್ಥಿಗಳು, ಬುರ್ಖಾ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಬಾಗಿಲು ಎದುರು ತಡೆದು ಬುರ್ಖಾ ಧರಿಸದಂತೆ ಒತ್ತಾಯಿಸುತ್ತಿರುವ ವಿಷಯವನ್ನು ವಿದ್ಯಾರ್ಥಿನಿಯರು ಪ್ರಾಚಾರ್ಯರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶಾಸಕ ಜೆಡಿ ನಾಯ್ಕರನ್ನು ಸಂಪರ್ಕಿಸಿದಾಗ, ನಾಲ್ವರು ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಿ ಕಾಲೇಜಿಗೆ ಬರದಂತೆ ಎಚ್ಚರಿಕೆ ನೀಡಿದ ಬಗ್ಗೆ ದೂರೊಂದು ಬಂದಿದೆ. ಈ ವಿದ್ಯಾರ್ಥಿಗಳನ್ನು ಕರೆಸಿ ಕ್ರಮ ಕೈಗೊಳ್ಳುವಂತೆ ಪ್ರಾಚಾರ್ಯರಿಗೆ ತಿಳಿಸಲಾಗಿದೆ. ತಪ್ಪಿತಸ್ಥ ವಿದ್ಯಾರ್ಥಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ನಾಯ್ಕ ಹೇಳಿದರು. ಬಂಟ್ವಾಳದ ಎಸ್ ವಿಎಸ್ ಕಾಲೇಜಿನಲ್ಲೂ ಬುರ್ಖಾ ವಿವಾದ ಸಾಕಷ್ಟು ಗೊಂದಲ ಸೃಷ್ಟಿಸಿತ್ತು.
(ದಟ್ಸ್ ಕನ್ನಡ ವಾರ್ತೆ)