ಬೆಂಗಳೂರು, ಜ. 7 : ವೈಕುಂಠ ಏಕಾದಶಿಯ ದಿನವಾದ ಇಂದು ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ದೇವರ ದರ್ಶನ ಮಾಡಲು ಬೆಂಗಳೂರಿನ ನಾನಾ ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ವಿಶೇಷವಾಗಿ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ.
ವಾಣಿವಿಲಾಸ ಆಸ್ಪತ್ರೆ ಸಮೀಪದ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಜನ ಜಮಾಯಿಸಿದ್ದರಿಂದ ಜನನಿಬಿಡ ರಸ್ತೆಯಲ್ಲಿ ಬೆಳಗಿನಿಂದ ಸಂಚಾರ ದಟ್ಟಣೆ ಉಂಟಾಯಿತು. ದೇವಗಿರಿ ಬೆಟ್ಟದ ಸ್ವಾಮಿಯ ದರ್ಶನಕ್ಕೆ ಭಕ್ತ ಸಮುದಾಯ ಮೈಲುದ್ದ ಕ್ಯೂ ನಿಂತಿದ್ದು ಭಕ್ತಿಪರವಶತೆಯ ಚಿತ್ರಗಳು ಬನಶಂಕರಿ ಎರಡನೇ ಹಂತದ ಪ್ರದೇಶದಲ್ಲಿ ಸಾಮಾನ್ಯವಾಗಿದೆ.
ಇದೇ ರೀತಿ, ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯಲ್ಲೂ ಸಹ ಜನಜಾತ್ರೆ ನೆರೆದಿದೆ. ಬಡವ ಶ್ರೀಮಂತ ಬೇಧಭಾವ ಇಲ್ಲದೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು ಕಾಣುತ್ತಿದೆ. ಈ ದೇವಸ್ಥಾನಕ್ಕೆ ಇಂದು ಬೆಳಗ್ಗೆ ತಮ್ಮ ಕುಟುಂಬದ ಸದಸ್ಯರ ಜತೆಗೂಡಿ ಬಂದ ಮಧುಗಿರಿಯ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಾವೊಬ್ಬ ಶಾಸಕಿ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು.
(ದಟ್ಸ್ ಕನ್ನಡ ವಾರ್ತೆ)
ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ