ಬೆಂಗಳೂರು : ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ಆವಿಷ್ಕರಿಸಿರುವ ಕೊಪ್ಪ ದ ನಿವಾಸಿ ನರಸಿಂಹ ಭಂಡಾರಿ ಅವರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಸಂಶೋಧನಾ ಫೌಂಡೇಷನ್ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿದೆ.
ಸಂಶೋಧನಾ ಮನೋಭಾವವನ್ನು ಉತ್ತೇಜಿಸುವ ದೃಷ್ಟಿಯಿಂದ ನೀಡುವ ಈ ಪ್ರಶಸ್ತಿಗೆ ರಾಜ್ಯದಿಂದ ತಂತ್ರಜ್ಞಾನ ವಲಯದ ಆವಿಷ್ಕಾರಗಳನ್ನು ನಡೆಸಿರುವ ಇತರ ಹನ್ನೊಂದು ಮಂದಿ ಆಯ್ಕೆಯಾಗಿರುವ ವಿಷಯವನ್ನು ರಾಜ್ಯ ಕೃಷಿ ಸಚಿವ ಟಿ.ಬಿ. ಜಯಚಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ದೇಶದ ವಿವಿಧ ಭಾಗಗಳ 1,637 ಸ್ಪರ್ಧಾರ್ಥಿಗಳ ಪೈಕಿ ಕರ್ನಾಟಕದ 12 ಮಂದಿಗೆ ಪ್ರಶಸ್ತಿ ಬಂದಿದೆ. ಪ್ರಥಮ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿರುವ ಭಂಡಾರಿ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಲಭಿಸಲಿದೆ. ಬೆಳಗಾಂನ ಅಣ್ಣಾ ಸಾಹೇಬ್ ಉಡ್ಗಾವಿ ತಮ್ಮ ವಾಟರ್ ಗನ್ ಉಪಕರಣ ಆವಿಷ್ಕಾರಕ್ಕೆ , ಪುತ್ತೂರಿನ ಸುದರ್ಶನ್ ಹಾಗೂ ಇಲೆಕ್ಟ್ರಿಕ್ ವಾಟರ್ ಹೀಟರ್ ಕಂಡು ಹಿಡಿದ ಬೆಂಗಳೂರಿನ ಎ.ಆರ್.ಶಿವಕುಮಾರ್ ರಾಷ್ಟ್ರಪ್ರಶಸ್ತಿ ಪಡೆದ ಇತರ ಪ್ರಮುಖರು.
ಕೇಂದ್ರ ನೀಡುತ್ತಿರುವ ಈ ಪ್ರಶಸ್ತಿಯ ಮಾದರಿಯಲ್ಲಿಯೇ ರಾಜ್ಯ ಸರಕಾರವು ಕೃಷಿ ಪಂಡಿತ ಪ್ರಶಸ್ತಿಯನ್ನು ಆರಂಭಿಸಲಿದೆ ಎಂದು ಸಚಿವರು ತಿಳಿಸಿದರು. ಕೇಂದ್ರದ ಈ ಸಾಲಿನ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು...
Prof Anil K Gupta, executive vicechairperson, National Innovation Foundation and Professor, Indian Institute of Management, PO Box 15051, Ahmedabad 380015, Gujarat.
(ಇನ್ಫೋ ವಾರ್ತೆ)
ಮುಖಪುಟ /
ಇವತ್ತು... ಈ ಹೊತ್ತು...
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.