ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾದ ಇತ್ತೀಚೆಗೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಮಂಗಳೂರಿನ ರಶ್ಮಿ ವಿಜೇತರಾಗಿದ್ದಾರೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಮೈಸೂರಿನ ನಿರೋಷಾ ಮತ್ತು ಎರಡನೇ ರನ್ನರ್ ಅಪ್ ಆಗಿ ಚಿತ್ರದುರ್ಗದ ಪ್ರತೀಕ್ ಆಯ್ಕೆಯಾಗಿದ್ದಾರೆ. ಮೊದಲ ಹಾಗೂ ಎರಡನೇ ರನ್ನರ್ ಅಪ್ಗಳಿಗೆ ಕ್ರಮವಾಗಿ ಎರಡು ಮತ್ತು ಒಂದು ಲಕ್ಷದ ಶೈಕ್ಷಣಿಕ ವಿಮೆ ನೀಡಲಾಯಿತು. ಫೈನಲ್ ಸ್ಪರ್ಧೆಗೆ ಮುಖ್ಯ ಅಥಿತಿಯಾಗಿ ಡಾ.ವಿಷ್ಣುವರ್ಧನ್, ಡೈಸಿ ಬೋಪಣ್ಣ ಹಾಗೂ ಶೋಭರಾಜ್ ಆಗಮಿಸಿದ್ದರು.
ಕರ್ನಾಟಕದಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಾವಿರಾರು ಪ್ರತಿಭೆಗಳಲ್ಲಿ ಕೆಲವರನ್ನು ಮಾತ್ರ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅಂತಿಮ ಸ್ಪರ್ಧಿಗಳಾಗಿ ರಶ್ಮಿ ಕುಂದರ್, ರಶ್ಮಿ ಮಂಗಳೂರು, ಮೈಸೂರಿನ ನಿರೋಷಾ ಮತ್ತು ಚಿತ್ರದುರ್ಗದ ಪ್ರತೀಕ್ ಸ್ಪರ್ಧಿಸಿದ್ದರು. ಮೂರು ತಾಸುಗಳವರೆಗೆ ನಡೆದ ಅಂತಿಮ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸ್ಫರ್ಧಿಯೂ ಕೂಡ ಉತ್ತಮಪ್ರದರ್ಶನ ನೀಡಿದರು. ಫೈನಲ್ ಸ್ಪರ್ಧೆಯಲ್ಲಿದ್ದ ರಶ್ಮಿ ಕುಂದೂರ್ ಮೊದಲ ಸುತ್ತಿನಲ್ಲೇ ವೈಯುಕ್ತಿಕ ಕಾರಣಗಳಿಂದ ಹೊರನಡೆದರು.
ಅತಿಥಿ ತೀರ್ಪುಗಾರರ ಸ್ಥಾನದಲ್ಲಿದ್ದ ವಿಷ್ಣುವರ್ಧನ್ ಈ ಪುಟಾಣಿಗಳ ಪ್ರತಿಭೆಗೆ ಯಾವುದೂ ಸಾಟಿ ಇಲ್ಲ. ನನಗೆ ಈ ತಿರ್ಪುಗಾರನ ಸ್ಥಾನದಲ್ಲಿ ಕೂರಲು ಭಯ. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನರ್ತಿಸುವ ಈ ಪುಟಾಣಿಗಳಲ್ಲಿ ಯಾರನ್ನು ವಿಜೇತರನ್ನಾಗಿ ಆಯ್ಕೆ ಮಾಡುವುದು ಎಂಬ ತೀರ್ಮಾನ ಕಷ್ಟಕರ ಎಂದು ಹೇಳಿದರು.
ಅಂತಿಮ ಸ್ಪರ್ಧೆಯಲ್ಲಿ ಕೇವಲ ಪುಟಾಣಿಗಳು ಮಾತ್ರವಲ್ಲದೇ ದೇಶದ ಪ್ರಸಿದ್ಧ ನೃತ್ಯ ತಂಡ ಕೇರಳದ ಶಿವಾಸ್ ಡಾನ್ಸ್ ಟ್ರೂಪ್ ಮತ್ತು ಮಂಗಳೂರಿನ ಎಕ್ಸ್ ಜೋನ್ ನೃತ್ಯ ತಂಡದಿಂದ ವಿಶೇಷ ನೃತ್ಯ ಪ್ರದರ್ಶನವಿತ್ತು.
ಕಳೆದ ಸಂಚಿಕೆಗಳಲ್ಲಿರುವಂತೆ ಸಿಂದು ಮೆನನ್ ಹಾಗೂ ಮಾಲೂರು ಶ್ರೀನಿವಾಸ್ ತೀರ್ಪುಗಾರರಾಗಿದ್ದರು. ಪುಟಾಣಿಗಳಾದ ಜ್ಯೇಷ್ಠ ನರಸಿಂಹ ಮತ್ತು ಶ್ರೇಯಾ ಕಾರ್ಯಕ್ರಮ ನಿರೂಪಕರಾಗಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಜೀ ಕನ್ನಡ ನೃತ್ಯ ರಸಸಂಜೆ ಸವಿಯೋಣ ಬಾರಾ!