ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರದ ಸಿಡಿ ಮತ್ತು ಧ್ವನಿಸುರುಳಿಗಳನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಪೈ ವೈಸ್ ರಾಯ್ ನಲ್ಲಿ ಬುಧವಾರ (ನ.4) ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. 'ಶಂಕರ್ ಐಪಿಎಸ್'ಚಿತ್ರೀಕರಣದಿಂದ ನೇರವಾಗಿ ವಿಜಯ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪೊಲೀಸ್ ದಿರಿಸಿನಲ್ಲಿದ್ದ ವಿಜಯ್ ಧ್ವನಿಸುರುಳಿಯನ್ನು ಅನಾವರಣ ಮಾಡಿದರು.
ಶ್ರೀರಂಗಪಟ್ಟಣದಲ್ಲಿ 'ಪೃಥ್ವಿ' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್ ಕುಮಾರ್ ಸಹ ಮೇಕಪ್ ನಲ್ಲೇ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 'ರಾಮ್'ಚಿತ್ರ ನೂರುದಿನ ಪೂರೈಸಲಿ ಎಂದು ವಿಜಯ್ ಹಾರೈಸಿದರು. ಚಿತ್ರದ ನಿರ್ಮಾಪಕ ಆದಿತ್ಯ ಬಾಬು ವಿಜಯ್ ಗೆ ನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸಿದರು.
ನಟ ಶ್ರೀನಾಥ್ ಮತ್ತು ರಂಗಾಯಣ ರಘು ಜತೆ 'ರಾಮ್' ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಚಿತ್ರದಲ್ಲಿ ಪ್ರಿಯಾಮಣಿ ಸೇರಿದಂತೆ ಬಹಳಷ್ಟು ಮಂದಿ ಉತ್ತಮ ಕಲಾವಿದರಿದ್ದಾರೆ ಎಂದು
'ಕರ್ನಾಟಕ ಹೆಮ್ಮೆಯ ಪುತ್ರ' ಬಿರುದಾಂಕಿತ ಪುನೀತ್ ರಾಜ್ ಕುಮಾರ್ ಈ ಸಂದರ್ಭದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಚಿತ್ರ ಮೂರು ಹಾಡುಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಲಾಯಿತು. ಚಿತ್ರದ ಒಂದು ಹಾಡು 'ಹೊಸ ಗಾನ ಬಜಾನ...' ಹಾಡನ್ನು ಪುನೀತ್ ರಾಜ್ ಕುಮಾರ್ ಅವರೇ ಹಾಡಿರುವುದು ವಿಶೇಷ. ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಉತ್ತಮವಾಗಿ ಮೂಡಿ ಬಂದಿವೆ ಎಂದು ಆದಿತ್ಯಬಾಬು ತಿಳಿಸಿದರು.
'ರಾಮ್'ಚಿತ್ರವನ್ನು ಕಷ್ಟಪಟ್ಟು ಬಹಳ ಜಾಗ್ರತೆಯಿಂದ ತೆರೆಗೆ ತರುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಮಾದೇಶ್ ಹೇಳಿದರು. ನಿರ್ಮಾಪಕ ಸೂರಪ್ಪ ಬಾಬು, ಎಂ ಜಿ ರಾಮಮೂರ್ತಿ, ಹಾಸ್ಯ ನಟ ಬುಲೆಟ್ ಪ್ರಕಾಶ್ ಮುಂತಾದವರು ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
'ರಾಮ್' ಚಿತ್ರದ ವಿಡಿಯೋ ವೀಕ್ಷಿಸಿ