{image-01-kalpana12.jpg thatskannada.oneindia.in}ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಅರಳಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟವರು ವರಕವಿ ಬೇಂದ್ರೆ. ''ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು'', ''ಕುಣಿಯೋಣು ಬಾರಾ ಕುಣಿಯೋಣು ಬಾ...'' ಎಂದು ಹಾಡಿ, ಬರೆದು ಉತ್ಸಾಹದ ಚಿಲುಮೆ ಚಿಮ್ಮಿಸಿದ ಕವಿ.
1970ರಲ್ಲಿ ತೆರೆಕಂಡ 'ಅರಿಶಿನ ಕುಂಕುಮ' ಚಿತ್ರಕ್ಕಾಗಿ ಬೇಂದ್ರೆ ಅವರ ''ಇಳಿದು ಬಾ...ತಾಯಿ...ಇಳಿದು ಬಾ...'' ಎಂಬ ಗೀತೆಯನ್ನು ಅಳವಡಿಸಿಕೊಳ್ಳಲಾಗಿದೆ. ಶಕ್ತಿಪೂರ್ಣ ಸಾಹಿತ್ಯಕ್ಕೆ ಸೊಗಸಾದ ಸಂಗೀತ ನೀಡಿದವರು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್. ಪಿಬಿ ಶ್ರೀನಿವಾಸ್ ಅವರ ಕಂಚಿನ ಕಂಠದಿಂದ ಹೊರಹೊಮ್ಮಿದ ಈ ಹಾಡು ಕೇಳುಗರಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ.
ಕಲ್ಯಾಣ್ ಕುಮಾರ್, ಕಲ್ಪನಾ, ಲೀಲಾವತಿ ಮುಖ್ಯಭೂಮಿಕೆಯಲ್ಲಿನ ಚಿತ್ರ. ರಾಜೇಶ್, ಬಿ.ವಿ.ರಾಧಾ, ದ್ವಾರಕೀಶ್ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದಲ್ಲಿ ಈ ಚಿತ್ರ ತೆರೆಕಂಡಿತ್ತು. ಈ ಹಾಡಿನ ದೃಶ್ಯದಲ್ಲಿ ಅನಕೃ ಮತ್ತಿತರ ಗಣ್ಯರು ಕಾಣಿಸಿಕೊಳ್ಳುತ್ತಾರೆ.
ಇಳಿದು ಬಾ ತಾಯಿ ಇಳಿದು ಬಾ ||ಪಲ್ಲವಿ||
ಹರನ ಜಡೆಯಿಂದ ಹರಿಯ ಅಡಿಯಿಂದ
ಋಶಿಯ ತೊಡೆಯಿಂದ ನುಸುಳಿ ಬಾ;
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ನಿನಗೆ ಪೊಡಮಡುವೆ ನಿನ್ನನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಇಳಿದು ಬಾ ತಾಯೇ ಇಳಿದು ಬಾ.
ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ;
ಶಿವಶುಭ್ರ ಕರುಣೆ
ಅತಿಕಿಂಚದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!
ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ
ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!
ಇಳಿದು ಬಾ ತಾಯಿ ಇಳಿದು ಬಾ
ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್ ದುಮ್ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯೆ ದುಡುಕಿ ಬಾ
ಹರಣ ಹೊಸದಾಗಿ ಹೊಳೆದು ಬಾ
ಬಾಳುಬೆಳಕಾಗೆ ಬೆಳೆದು ಬಾ
ಕೈ ತೊಳೆದು ಬಾ
ಮೈ ತಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
(ದಟ್ಸ್ ಕನ್ನಡ ಚಿತ್ರವಾರ್ತೆ)