ದಂಪತಿಗಳಾದ ಉಪೇಂದ್ರ, ಪ್ರಿಯಾಂಕ ಒಟ್ಟಾಗಿ ನಟಿಸುತ್ತಿರುವ ಚಿತ್ರ ಶ್ರೀಮತಿ. ಈ ಚಿತ್ರದ ಹಾಡು ಹಾಗೂ ಕೆಲ ದೃಶ್ಯಗಳನ್ನು ಸುಂದರ ದ್ವೀಪ ಮಾಲ್ಡೀವ್ಸ್ನಲ್ಲಿ 8 ದಿನಗಳ ಕಾಲ ಚಿತ್ರೀಕರಿಸಿಕೊಂಡು ಚಿತ್ರತಂಡ ಬೆಂಗಳೂರಿಗೆ ಹಿಂತಿರುಗಿದೆ. ನಿರ್ಮಾಪಕ ಆರ್.ಶಂಕರ್ ಉಳಿದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ರುಪ್ಪೀಸ್ ರೆಸಾರ್ಟ್ನಲ್ಲಿ ಅದ್ಭುತವಾದ ಸೆಟ್ ಹಾಕಿಸುತ್ತಿದ್ದಾರೆ.
ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಸಂಕಲನ ಕಾರ್ಯ ನಡೆಯುತ್ತಿದೆ. ಒಟ್ಟು 48 ದಿನಗಳ ಚಿತ್ರೀಕರಣ ನಡೆಸಲಾಗಿದ್ದು,3 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಡಿಸೆಂಬರ್ ಅಂತ್ಯದ ವೇಳೆಗೆ ಚಿತ್ರವನ್ನು ತೆರೆಗರ್ಪಿಸುವ ಸಿದ್ಧತೆಯಲ್ಲಿದ್ದಾರೆ ನಿರ್ಮಾಪಕ ಆರ್.ಶಂಕರ್.
ಜಾನಿಲಾಲ್ರ ಛಾಯಾಗ್ರಹಣ ಇರುವ ಈ ಚಿತ್ರವನ್ನು ಸಂಪತ್ ನಂದಿ ನಿರ್ದೇಶಿಸುತ್ತಿದ್ದಾರೆ. ಪೆಂಡ್ಯಾಲ ಕೃಷ್ಣರ ಸಂಗೀತ ಸಂಯೋಜನೆ, ಉಪೇಂದ್ರರ ಚಿತ್ರಕಥೆ ಹಾಗೂ ಸಂಭಾಷಣೆ ಇದ್ದು, ಬಾಲಿವುಡ್ ಬೆಡಗಿ ಸೆಲಿನಾ ಜೇಟ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಹಿಂದಿಯ ಹಿರಿಯ ನಟ ಪ್ರೇಮ್ ಚೋಪ್ಡಾ, ಸಯ್ಯಾಜಿ ಶಿಂಧೆ, ಕೋಟಾ ಶ್ರೀನಿವಾಸರಾವ್ ಉಳಿದ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)