ತಮಿಳು ಚಿತ್ರೋದ್ಯಮದ ಹೊಸ ಅಲೆ ಯುವ ಸಂಗೀತ ನಿರ್ದೇಶಕ, 21ರ ಹರೆಯದ ಜಿ.ವಿ.ಪ್ರಕಾಶ್ ಈಗ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರಕಾಶ್ ಎಂದರೆ ಅಷ್ಟಾಗಿ ಯಾರಿಗೂ ಗೊತ್ತಾಗುವುದೇ ಇಲ್ಲ. ಬಾಲಿವುಡ್ ಸಂಗೀತ ಸಂಯೋಜಕ
ಎ.ಆರ್.ರೆಹಮಾನ್ ರ ಸೋದರಳಿಯ ಪ್ರಕಾಶ್ ಎಂದರೆ 'ಹೌದಾ'ಎನ್ನುತ್ತ್ತಾರೆ! ಸೂಪರ್ ಸ್ಟಾರ್ ರಜನೀಕಾಂತ್ ರ
ಕುಚೇಲನ್ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದ್ದು ಇವರೆ ಎಂದರೆ ಪ್ರಕಾಶ್ ಬಗ್ಗೆ ಪೂರ್ಣ ಚಿತ್ರ ಸಿಗುತ್ತದೆ.
ತೆಲಗು, ತಮಿಳು ಸೇರಿದಂತೆ ಈವರೆಗೂ ಸುಮಾರು 14 ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದೀಪಾವಳಿ ಸಮಯಕ್ಕೆ ಬಿಡುಗಡೆಯಾಗಲಿರುವ ಕನ್ನಡದ ರಮ್ಯ, ಸೂರ್ಯ ಅಭಿನಯದ 'ವರ್ಣಂ ಆಯಿರಮ್ ' ಪ್ರಕಾಶ್ ಸಂಯೋಜನೆಯ ಹೊಚ್ಚಹೊಸ ಚಿತ್ರ.
ಕನ್ನಡ ಚಿತ್ರೋದ್ಯಮದ ಹೊಸ ಸುದ್ದಿಯೆಂದರೆ, ಗೋಲ್ಡನ್ ಸ್ಟಾರ್ ಗಣೇಶ್ ರ ಹೊಸ ಚಿತ್ರಕ್ಕೆ ಜಿ.ವಿ.ಪ್ರಕಾಶ್ ಸಂಗೀತ ನಿರ್ದೇಶಿಸಲಿದ್ದಾರೆ. ಈ ಚಿತ್ರವನ್ನು ತ್ಯಾಗು ಮತ್ತು ರೆಹಮಾನ್ ನಿರ್ಮಿಸುತ್ತಿದ್ದಾರೆ. ಇದು ಮತ್ತೊಂದು ರೀಮೇಕ್ ಚಿತ್ರ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ತೆಲುಗು ಚಿತ್ರರಂಗದ ಬಾಕ್ಸಾಫೀಸಲ್ಲಿ ಗೆದ್ದ 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರದ ರಿಮೇಕ್ ಇದು. ಕನ್ನಡದಲ್ಲಿ ಶೀರ್ಷಿಕೆಯಾಗಿ ಗಣೇಶ್ ಅವರ ಜನಪ್ರಿಯ ಗೀತೆ 'ಉಲ್ಲಾಸದ ಹೂಮಳೆ' ಸಾಲನ್ನೇ ಆಯ್ಕೆ ಮಾಡಲಾಗಿದೆ. ಈ ಚಿತ್ರಕ್ಕೆ ನಾಯಕಿ ಸೇರಿದಂತೆ ಮತ್ತಿತರ ತಾರಾಗಣದ ಹುಡುಕಾಟದಲ್ಲಿದ್ದಾರೆ ನಿರ್ದೇಶಕ, ನಿರ್ಮಾಪಕರು.
ನಿರ್ದೇಶನದ ಜವಾಬ್ದಾರಿಯನ್ನು ದೇವರಾಜ್ ಪಾಲನ್ ಹೊತ್ತಿದ್ದಾರೆ. ಈ ಹಿಂದೆ ನಾಗಣ್ಣ, ಓಂ ಪ್ರಕಾಶ್ ರಾವ್ ಹಾಗೂ ಸುರೇಶ್ ಕೃಷ್ಣ ಅವರ ಜೊತೆ ಸಹ ನಿರ್ದೇಶಕರಾಗಿ ದುಡಿದ ಅನುಭವಿ. ಒಟ್ಟಿನಲ್ಲಿ ಸಂಗೀತ ತಮಿಳುನಾಡಿನಿಂದ ಹಾಗೂ ಕಥೆ ಆಂಧ್ರಪ್ರದೇಶದಿಂದ ನೇರವಾಗಿ ಆಮದಾಗುತ್ತಿದ್ದು ಕನ್ನಡ ಚಿತ್ರರಂಗ ಹೊಸ ಹೊಸ ಪ್ರಯೋಗಗಳಿಗೆ ಒಳಪಡುತ್ತಿದೆ!
(ದಟ್ಸ್ ಕನ್ನಡ ಸಿನಿವಾರ್ತೆ)
'ವಂಶಿ' ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಸ್ಪಷ್ಟೀಕರಣ ಸ್ವಮೇಕ್ ಮುದುಡುತ್ತಿದೆ ರೀಮೇಕ್ ಅರಳುತ್ತಿದೆ