ಶಿವರಾಜ್ ಕುಮಾರ್ ಅಭಿನಯದ 'ಹೊಡಿ ಮಗ' ಚಿತ್ರದ ಶೀರ್ಷಿಕೆ ಬಗ್ಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಚಿತ್ರದ ಶೀರ್ಷಿಕೆ ಪ್ರಚೋದನಕಾರಿಯಾಗಿದ್ದು ಬದಲಾಯಿಸುವಂತೆ ಸೂಚಿಸಿದೆ. ಹಾಗಾಗಿ ಮೇ 1ರಂದು ಬಿಡುಗಡೆಗೆ ಸಿದ್ಧವಾಗಿದ್ದ 'ಹೊಡಿಮಗ' ಚಿತ್ರಕ್ಕೆ ಈಗ ದೊಡ್ಡ ವಿಘ್ನವೇ ಎದುರಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶಿವರಾಜ್ ಕುಮಾರ್, ಶೀರ್ಷಿಕೆಯನ್ನು 'ಜೋಗಿ' ಚಿತ್ರದ ಜನಪ್ರಿಯ ಹಾಡಿನಿಂದ ಆಯ್ಕೆ ಮಾಡಿಕೊಂಡಿದ್ದೇವೆ. ಯಾರನ್ನೂ ಪ್ರಚೋದಿಸಲು ಅಥವಾ ಯಾರನ್ನೂ ಉದ್ದೇಶವಾಗಿಟ್ಟುಕೊಂಡು ಶೀರ್ಷಿಕೆಯನ್ನು ಇಟ್ಟಿಲ್ಲ. ಕೇವಲ ಮನರಂಜನೆಯ ಉದ್ದೇಶದಿಂದ ಹಾಗೆ ಇಡಲಾಗಿದೆಯೇ ಹೊರತು ಇನ್ಯಾವ ಉದ್ದೇಶವು ಇಲ್ಲ. ಇಷ್ಟು ದಿನ ಸುಮ್ಮನಿದ್ದು ಈಗ ಚಿತ್ರ ಬಿಡುಗಡೆಗೆಯಾಗುತ್ತಿರುವ ಸಮಯದಲ್ಲಿ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸುವುದು ಸರಿಯಿಲ್ಲ. ಆರಂಭದಲ್ಲೇ ತಿಳಿಸಬೇಕಿತ್ತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಶಿವರಾಜ್ ಕುಮಾರ್ ಚಿತ್ರವೊಂದರ ಚಿತ್ರೀಕರಣಕ್ಕಾಗಿ ವಿದೇಶದಲ್ಲಿದ್ದಾರೆ.
ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಪ್ರತಿಕ್ರಿಯಿಸುತ್ತಾ, ಶೀರ್ಷಿಕೆ ಸೇರಿದಂತೆ ಚಿತ್ರದಲ್ಲಿ ಕೆಲವು ಪ್ರಚೋದನಕಾರಿ ದೃಶ್ಯಗಳಿವೆ. ಹಾಗಾಗಿ ಶೀರ್ಷಿಕೆ ಬದಲಾಯಿಸುವಂತೆ ಚಿತ್ರದ ನಿರ್ಮಾಪಕರಿಗೆ ಸೂಚಿಸಿದ್ದೇವೆ. ಕಳೆದ ಅಕ್ಟೋಬರ್ ನಲ್ಲೇ ಶೀರ್ಷಿಕೆ ಬದಲಾಯಿಸುವಂತೆ ಸೂಚಿಸಲಾಗಿತ್ತು. ಇದು ಕೇವಲ ನನ್ನೊಬ್ಬನ ನಿರ್ಧಾರವಲ್ಲ. ಮಂಡಳಿಯ ಇತರೆ ಸದಸ್ಯರು ಶೀರ್ಷಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು. ಮಂಗಳವಾರ ಸಂಜೆ 'ಹೊಡಿ ಮಗ' ಚಿತ್ರದ ನಿರ್ಮಾಪಕ ಎನ್.ಎಸ್. ರಾಜ್ಕುಮಾರ್ ಮತ್ತು ನಿರ್ದೇಶಕ ಪಿ.ಸತ್ಯ ಸೆನ್ಸಾರ್ ಮಂಡಳಿಯನ್ನು ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟಪಡಿಸುವುದಾಗಿ ತಿಳಿಸಿದ್ದಾರೆ.
ಹೊಡಿಮಗ ಚಿತ್ರದ ವಿವರಹೊಡಿಮಗ ಚಿತ್ರವನ್ನು ಪಿ.ಸತ್ಯ ನಿರ್ದೇಶಿಸುತ್ತಿದ್ದು ಕತೆ, ಚಿತ್ರಕತೆ ಮತ್ತ್ತು ಸಂಭಾಷಣೆ ಸಹ ಅವರೇ ರಚಿಸಿದ್ದಾರೆ. ಆರ್.ಆರ್.ಆರ್. ಕ್ರಿಯೇಷನ್ಸ್ ಲಾಂಛನದಲ್ಲಿ ಎನ್.ಎಸ್. ರಾಜ್ಕುಮಾರ್, ವಿ.ಎಸ್. ರಾಜ್ಕುಮಾರ್, ಕೆ.ವಿ. ರಾಮರಾವ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಂಗೀತ-ಜಸ್ಸಿ ಗಿಫ್ಟ್; ಛಾಯಾಗ್ರಹಣ ರವಿ. ಪಿ.ಎಲ್; ಸಾಹಸ ಡಿಫರೆಂಟ್ ಡ್ಯಾನಿ; ಸಹ ನಿರ್ದೇಶನ ವಿ.ಜೆ.ಪಿ. ಪುರುಷೋತ್ತಮ; ನಿರ್ವಹಣೆ ಕುಮಾರ್-ಚಂಪಕಧಾಮಬಾಬು. ಈ ಚಿತ್ರದಲ್ಲಿ ಶಿವರಾಜ್ಕುಮಾರ್, ನಿಖಿಲೇಟ್ ಬರ್ಡ್, ಮಂಜುಭಾರ್ಗವಿ, ಶರತ್ ಲೋಹಿತಾಶ್ವ, ತಿಲಕ್, ಅವಿನಾಶ್, ಆದಿ ಲೊಕೇಶ್ ಪವಿತ್ರ ಲೊಕೇಶ್, ಹುಲಿವಾನ ಗಂಗಾಧರಯ್ಯ, ಸುರೇಶ ಮಂಗಳೂರ್, ಗುರುರಾಜ್ ಹೊಸಕೋಟೆ, ಲೋಚನ್ ಮುಂತಾದವರು ಅಭಿನಯಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯಚೆಲುವೆಯೆ ನಿನ್ನ ನೋಡಲು ಚಿತ್ರದಲ್ಲಿ ಸೋನಾಲ್ ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'