{image-09-mathur-raghu2.jpg thatskannada.oneindia.in}ಉನ್ನತ ಶಿಕ್ಷಣ ಸಚಿವರಾದಂತಹ ಅರವಿಂದ ಲಿಂಬಾವಳಿಯವರು ಶಿಕ್ಷಕರ ವರ್ಗಾವಣೆಯ ವಿಷಯದಲ್ಲಿ ತೆಗೆದುಕೊಂಡಿರುವ ಯೋಜನೆಯ ನಿರ್ಧಾರದ ಬಗ್ಗೆ ಮೊನ್ನೆ ಭೇಟಿಯಾದ ಹಿರಿಯರೊಬ್ಬರು ತಿಳಿಸಿದಾಗ ಆಶ್ಚರ್ಯ ಹಾಗೂ ಸಂತೋಷ ಎರಡೂ ಒಟ್ಟಿಗೆ ಅಟ್ಟಿಸಿಕೊಂಡು ಬಂದವು.
ಮಾನ್ಯ ಸಚಿವರು ಶಿಕ್ಷಕರ ವರ್ಗಾವಣೆಯಲ್ಲಿ ನಡೆಯುವ ಅಕ್ರಮ, ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಅವಶ್ಯವಿರುವ ಶಿಕ್ಷಕರನ್ನು ಸಂದರ್ಶನ ಮಾಡಿ, ಅವರು ಇಚ್ಚಿಸಿದ ಸ್ಥಳಗಳಲ್ಲಿ ವರ್ಗಾವಣೆ ಮಾಡುವುದು ಮತ್ತು ನಿಜವಾಗಿಯೂ ಶಿಕ್ಷಕರ ಕೊರತೆಯಿದ್ದರೆ ತಕ್ಷಣವೇ ಕೆಲಸ ಆಗುವಂತೆ ಮಾಡುವತ್ತ ಸಾಗಿರುವುದು ಖಂಡಿತ ಅತ್ಯಂತ ಶ್ಲಾಘನೀಯವಾದುದು.
ಈವರೆಗೆ ತಮ್ಮ ಪ್ರಭಾವದಿಂದ ಹಾಗೂ ತಮ್ಮ ಹಣಬಲದಿಂದ ವರ್ಗಾವಣೆಯನ್ನು ಮಾಡಿಸಿಕೊಳ್ಳುತ್ತಿದ್ದ ಪ್ರಭಾವಿಗಳು ಹಾಗೂ ಶ್ರೀಮಂತರ ನಡುವೆ, ವರ್ಗಾವಣೆಗೋಸ್ಕರ ವಿಧಾನಸೌಧಕ್ಕೆ ಅಲೆಯುವ, ಹೊಟ್ಟೆಬಾಕ ದಲ್ಲಾಳಿಗಳ ಜೇಬು ತುಂಬಿಸುವ ಮಧ್ಯಮ ವರ್ಗದವರ ನಾಯಿಪಾಡಿಗಿನ್ನು ಬಿಡುಗಡೆಯ ಸೂಚನೆ.
ಹಾಗೆಯೇ ತಮ್ಮ ಅಸಹಾಯಕತೆಯನ್ನು ವಿದ್ಯಾರ್ಥಿಗಳ ಮೇಲೆ ಪ್ರದರ್ಶಿಸುವ ಹಾಗೂ ಉದಾಸೀನತೆಯಿಂದ ಕೆಲಸ ನಿರ್ವಹಿಸುವ ಶಿಕ್ಷಕರ ಕಿರಿಕಿರಿಯ ಕಾಟ ವಿದ್ಯಾರ್ಥಿಗಳಿಗೂ ತಪ್ಪುತ್ತದೆ. ಹಾಗೂ ಫಲಾನುಭವಿ ಶಿಕ್ಷಕರಿಂದ ಇನ್ನೂ ಹೆಚ್ಚಿನ ಪ್ರಾಮಾಣಿಕ ಕರ್ತವ್ಯವನ್ನು ಅಪೇಕ್ಷಿಸಬಹುದು.
ಸಚಿವರ ಈ ಉತ್ತಮ ಯೋಜನೆಯ ಅನುಷ್ಠಾನದ ಹಿಂದೆ ಇನ್ನೂ ಹೆಚ್ಚಿನ ಪ್ರಾಮಾಣಿಕತೆಯನ್ನು ಅಪೇಕ್ಷಿಸುತ್ತ ಈ ಯೋಜನೆಯು ಧೀರ್ಘಕಾಲ ದೊರಕುವಂತಾಗಲಿ ಎಂದು ಹಾರೈಸುತ್ತೇನೆ.